ಉತ್ತರ ಗೋವಾ ಜಿಲ್ಲೆಯು ಭಾರತದ ಗೋವಾ ರಾಜ್ಯದ ಎರಡು ಜಿಲ್ಲೆಗಳಲ್ಲಿ ಒಂದಾಗಿದೆ. ಈ ಜಿಲ್ಲೆಯು ೧,೭೩೬ ಚ.ಕಿ.ಮಿ ವಿಸ್ತೀರ್ಣ ಹೊಂದಿದೆ. ಉತ್ತರದಲ್ಲಿ ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆ, ಪೂರ್ವದಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆ, ದಕ್ಷಿಣದಲ್ಲಿ ದಕ್ಷಿಣ ಗೋವಾ ಜಿಲ್ಲೆ ಹಾಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಆವೃತ್ತವಾಗಿದೆ. == ಇತಿಹಾಸ == ಈಗಿನ ಉತ್ತರ ಗೋವಾದ ಪರ್ಣೆಂ, ಬಿಚೋಲಿಂ ಮತ್ತು ಸತಾರಿ ಭಾಗವು ಸಾವಂತವಾಡಿ ರಾಜ್ಯದ ಅಧಿಪತ್ಯದಲ್ಲಿತ್ತು. ಪೋಂಡವು ಸೋಂದ, ಮರಾಠಾ ಸಾಮ್ರಾಜ್ಯ ಮತ್ತು ಸಾವಂತವಾಡಿಯ ನಡುವೆ ಹಂಚಿಹೋಗಿತ್ತು. ಆದ್ದರಿಂದ ಪೋರ್ಚುಗೀಸರ ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಇವು ಹಿಂದೂಗಳಿಗೆ ಸುರಕ್ಷಿತ ಪ್ರದೇಶಗಳಾಗಿತ್ತು. ಈ ಭಾಗಗಳನ್ನು ಪೋರ್ಚುಗೀಸರು ೧೮ನೇ ಶತಮಾನದ ಕೊನೆಯಲ್ಲಿ ಆಕ್ರಮಿಸಿಕೊಂಡರು. ೧೯೬೧ರಲ್ಲಿ ಭಾರತವು ಗೋವಾ ವಿಮೋಚಿಸುವ ತನಕ ಪೋರ್ಚುಗೀಸರ ಕೈಯಲ್ಲೇ ಉಳಿಯಿತು. ೧೯೬೫ರಲ್ಲಿ ಗೋವಾ ಹಾಗೂ ದಮನ್ ಮತ್ತು ದಿಯುವನ್ನು ಒಗ್ಗೂಡಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ೩೦ ಮೇ ೧೯೮೭ರಲ್ಲಿ ಗೋವಾಗೆ ರಾಜ್ಯಪಟ್ಟ ದೊರೆತು, ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಎಂಬ ಎರಡು ಜಿಲ್ಲೆಗಳಾಗಿ ವಿಂಗಡಿಸಲಾಯಿತು. === ಪೋರ್ಚುಗೀಸರ ಆಡಳಿತ (೧೫೧೦-೧೯೬೧) === ==== ಪೋರ್ಚುಗೀಸರ ಆಗಮನ (೧೪೯೮) ==== ಭಾರತ ಮತ್ತು ಪೂರ್ವ ಏಷಿಯಾದೊಂದಿಗೆ ಮಸಾಲೆ ಪದಾರ್ಥಗಳ ವ್ಯಾಪಾರ ನಡೆಸಲು ಪೋರ್ಚುಗೀಸರು ಸಮುದ್ರ ಮಾರ್ಗವನ್ನು ಹುಡುಕುತ್ತಿದ್ದರು. ಇದರ ಪರಿಣಾಮವಾಗಿ ವಾಸ್ಕೋ ಡ ಗಾಮ ಆಫ್ರಿಕಾದ ದಕ್ಷಿಣ ತುದಿಯಾದ ಕೇಪ್ ಆಫ್ ಗುಡ್ ಹೋಪ್ ಸುತ್ತುವರೆದು, ಕೇರಳದ ಕಲ್ಲಿಕೋಟೆಗೆ ಬಂದಿಳಿದನು. ಇದರ ಮೂಲಕ ಮಸಾಲೆ ವ್ಯಾಪಾರದ ಮೇಲೆ ಅರಬ್ಬರು ಹೊಂದಿದ್ದ ಏಕಸ್ವಾಮ್ಯವು ಮುರಿದುಬಿದ್ದಿತು. ==== ಎಸ್ಟಾಡೊ ಡ ಇಂಡಿಯ (೧೫೧೦) ==== ಪೋರ್ಚುಗೀಸ್ ಸಾಮ್ರಾಜ್ಯದ ಪೂರ್ವಭಾಗವನ್ನು ಸ್ಥಾಪಿಸುವ ಸಲುವಾಗಿ, ಗೋವಾದ ಗವರ್ನರ್-ಜನರಲ್ ಆಗಿದ್ದ ಆಲ್ಫನ್ಸೊ ಡಿ ಅಲ್ಬುಕರ್ಕಿಯು ವಾಣಿಜ್ಯ ಮಾರ್ಗದ ಆಯಕಟ್ಟಿನ ಪ್ರದೇಶಗಳನ್ನು ವಶಪಡಿಸಲು ಹೊರಟನು. ವಿಜಯನಗರ ಸಾಮ್ರಾಜ್ಯದ ತಿಮ್ಮಪ್ಪನ ಆಹ್ವಾನದ ಮೆರೆಗೆ ಆದಿಲ್ ಶಾಹಿಯರ ಕೈಯಿಂದ ಗೋವಾ ವಶಪಡಿಸಿಕೊಂಡನು. ತಾತ್ಕಾಲಿಕವಾಗಿ ಸೋತು ನಿರ್ಗಮಿಸಿದರೂ, ೨೫ ನವೆಂಬರ್ ೧೫೧೦ರಲ್ಲಿ ಪುನಃ ವಶಪಡಿಸಿಕೊಂಡು ಗೆದ್ದನು. ಇದು ಸಂತ್ ಕ್ಯಾಥರೀನ್‍ ದಿನದಲ್ಲಿ ನಡೆದ ಕಾರಣ, ಗೆಲುವನ್ನು ಸಂತ್ ಕ್ಯಾಥರೀನ್‍ಗೆ ಅರ್ಪಿಸಿ ಔತಣಕೂಟವನ್ನು ನಡೆಸಲಾಯಿತು. ೧೫೩೦ರಲ್ಲಿ ಗೋವಾವು ಕೇಪ್ ಆಫ್ ಗುಡ್ ಹೋಪ್‍ನಿಂದ ಚೀನಾ ಸಮುದ್ರದ ವರೆಗಿನ ಪೋರ್ಚುಗೀಸ್ ಸಾಮ್ರಾಜ್ಯದ ಪೂರ್ವಭಾಗದ ರಾಜಧಾನಿಯಾಯಿತು. === ಸ್ವಾತಂತ್ರ್ಯಪರ ಹೋರಾಟ (೧೯೪೬-೧೯೬೧) === ==== ಜೈ ಹಿಂದ್ ಚಳುವಳಿ (೧೯೪೬) ==== ಬ್ರಿಟೀಷ್ ಭಾರತದ ಸ್ವಾತಂತ್ರ್ಯ ಚಿಳುವಳಿಯ ಕಿಚ್ಚು ಗೋವಾಗೂ ಹಬ್ಬಿತು. ೧೮ ಜೂನ್ ೧೯೪೬ರಲ್ಲಿ ನಿಶೇದಾಜ್ಞೆಯನ್ನು ಉಲ್ಲಂಘಿಸಿ ದೊಡ್ಡ ಜನಸಮೂಹದೆದುರು ಮಾತನಾಡಿದ ಕಾರಣ, ಸಮಾಜವಾದಿ ಹೋರಾಟಗಾರ ಡಾ. ರಾಮ್ ಮನೋಹರ್ ಲೋಹಿಯ ಅವರನ್ನು ಗೋವಾದಲ್ಲಿ ಬಂಧಿಸಲಾಯಿತು. ಆಗಸ್ಟ್ ೧೯೪೬ರಲ್ಲಿ ಗೋವಾ ಗಡಿಭಾಗದ ಲೋಂಡಾದಲ್ಲಿ, ಗೋವಾದ ರಾಷ್ಟ್ರೀಯತಾವಾದಿ ಕಾರ್ಮಿಕರ ಸಾಮೂಹಿಕ ಸಭೆಯು ಶಾಂತಿಯುತ ಪ್ರತಿಭಟನೆಗಳ ಯೋಜನೆಯನ್ನು ರೂಪಿಸಿತು. ಜನರ ಸ್ವಾತಂತ್ರ್ಯದ ಹಂಬಲವನ್ನು ವ್ಯಕ್ತಪಡಿಸಲು ಪೋರ್ಚುಗೀಸರ ವಸಾಹತುಗಳಲ್ಲಿ ವರ್ಷಾಂತ್ಯದವರೆಗೂ ಸತ್ಯಾಗ್ರಹಗಳನ್ನು ಪ್ರಾರಂಭಿಸಲಾಯಿತು. ಇದರ ಪರಿಣಾಮವಾಗಿ ೧,೫೦೦ ಜನರಿಗೆ ಜೈಲುಶಿಕ್ಷೆ ವಿಧಿಸಿ, ನಾಯಕರನ್ನು ಗಡಿಪಾರು ಮಾಡಲಾಯಿತು. ==== ಗೋವಾ ಕಾರ್ಯ ಸಮಿತಿ (೧೯೫೩) ==== ಫ್ರೆಂಚರು ಭಾರತವನ್ನು ತೊರೆದ ನಂತರ, ಗೋವಾವನ್ನು ಶಾಂತಿಯುತವಾಗಿ ಭಾರತೀಯ ಒಕ್ಕೂಟಕ್ಕೆ ವರ್ಗಾಯಿಸುವು ಕುರಿತು ಭಾರತ ಸರ್ಕಾರವು ಪೋರ್ಚುಗೀಸರೊಂದಿಗೆ ಮತುಕತೆ ನಡೆಸಲು ಪ್ರಯತ್ನಿಸಿತು. ಇದರ ಪರಿಣಾಮವಾಗಿ, ದೇಶ ವಿದೇಶಗಳಲ್ಲಿ ಭಾರತ ಪರ ಸಹಾನುಭೂತಿಯನ್ನು ಜಾಗೃತಗೊಳಿಸಲು ಗೋವಾ ಕ್ರಿಯಾ ಸಮಿತಿಯನ್ನು ಬಾಂಬೆಯಲ್ಲಿ ರಚಿಸಲಾಯಿತು. ==== ಆಪರೇಶನ್ ವಿಯಜ್ (೧೯೬೧) ==== ೧೯೫೮ರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪ್ರೊ. ಅಲೋಶಿಯಸ್ ಸೋರೆಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗೋವಾ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡವು. ಆಪರೇಶನ್ ವಿಜಯ್ ಯೋಜನೆಯೊಂದಿಗೆ ಭಾರತದ ಸಶಸ್ತ್ರ ಪಡೆಗಳು ಗೋವಾಗೆ ನುಗ್ಗಿದವು. ಬಲವಾದ ಪ್ರತಿರೋಧ ಎದುರಾಗದೇ, ಡಿಸೆಂಬರ್ ೧೯೬೧ರಲ್ಲಿ ಗೋವಾವನ್ನು ಪೋರ್ಚುಗೀಸರಿಂದ ಮುಕ್ತಿಗೊಳಿಸಲಾಯಿತು. == ಭೌಗೋಳಿಕತೆ == ಭೌಗೋಳಿಕವಾಗಿ ಉತ್ತರ ಗೋವಾ ಜಿಲ್ಲೆಯು 15o 48’ 00" ಇಂದ 14o 53’ 54" ಅಕ್ಷಾಂಶಗಳು ಮತ್ತು 73o ಇಂದ 75o ರೇಖಾಂಶಗಳ ನಡುವೆ ಇದೆ. === ಹವಾಮಾನ === == ಆಡಳಿತ == ಗೋವಾದ ರಾಜಧಾನಿ ಆಗಿಯುವ ಪಣಜಿಯು ಉತ್ತರ ಗೋವಾದ ಜಿಲ್ಲಾ ಕೇಂದ್ರವಾಗಿದೆ. ಜಿಲ್ಲೆಯು ಕೊಂಕಣ ಪ್ರದೇಶದ ಒಂದು ಭಾಗವಾಗಿದೆ. ಜಿಲ್ಲೆಯು ಮೂರು ಉಪವಿಭಾಗಗಳನ್ನು ಒಳಗೊಂಡಿದೆ - ಪಣಜಿ, ಮಪುಸ ಮತ್ತು ಬಿಚೋಲಿಂ. ಜಿಲ್ಲೆಯಲ್ಲಿ ಐದು ತಾಲ್ಲೂಕುಗಳಿವೆ - ತಿಸ್ವಾಡಿ (ಪಣಜಿ), ಬಾರ್ದೇಸ್ (ಮಪುಸ), ಪರ್ಣೆಂ, ಬಿಚೋಲಿಂ ಮತ್ತು ಸತಾರಿ (ವಾಲ್ಪೋಯ್). ಪೋಂಡ ತಾಲ್ಲೂಕನ್ನು ಜನವರಿ ೨೦೧೫ರಲ್ಲಿ ಉತ್ತರ ಗೋವಾದಿಂದ ದಕ್ಷಿಣ ಗೋವಾಗೆ ಸೇರಿಸಲಾಯಿತು. == ಜನಸಂಖ್ಯೆ ಮಾಹಿತಿ == === ಜನಸಂಖ್ಯೆ === ೨೦೧೧ರ ಜನಗಣತಿಯ ಪ್ರಕಾರ ಉತ್ತರ ಗೋವಾದ ಜನಸಂಖ್ಯೆಯು ೮೧೮,೦೦೮ ಆಗಿದೆ. ಇದು ಹೆಚ್ಚುಕಡಿಮೆ ಕೊಮೊರೊಸ್ ದೇಶದಷ್ಟು, ಅಥವಾ ಅಮೆರಿಕದ ದಕ್ಷಿಣ ಡಕೋಟ ರಾಜ್ಯದಷ್ಟಿದೆ. ಜನಸಂಖ್ಯಾವಾರು ಭಾರತದ ೬೪೦ ಜಿಲ್ಲೆಗಳಲ್ಲಿ ೪೮೦ನೇ ಸ್ಥಾನದಲ್ಲಿದೆ. ಜಿಲ್ಲೆಯ ಜನಸಾಂದ್ರತೆಯು ಚ.ಕಿ.ಮಿ. ಗೆ ೪೭೧ ಆಗಿದೆ. ೨೦೦೧-೨೦೧೧ರ ದಶಕದಲ್ಲಿ ಜನಸಂಖ್ಯಾ ಬೆಳವಣಿಗೆ ಪ್ರಮಾಣವು ೭.೮% ಆಗಿತ್ತು. ಲಿಂಗಾನುಪಾತವು ೯೫೯ ಆಗಿದೆ (೧,೦೦೦ ಪುರುಷರಿಗೆ ೯೫೯ ಮಹಿಳೆಯರು). ಸಾಕ್ಷರತಾ ಪ್ರಮಾಣವು ೮೮.೮೫% ಆಗಿದೆ. === ಭಾಷೆ === ಕೊಂಕಣಿ ಭಾಷೆಯು ಉತ್ತರ ಗೋವಾದ ಬಹುತೇಕರ ತಾಯಿನುಡಿಯು ಆಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಮರಾಠಿ ಭಾಷಿಕರೂ ಇದ್ದಾರೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ಬಹುತೇಕರಿಗೆ ಅರ್ಥವಾಗುತ್ತದೆ. ಪೋರ್ಚುಗೀಸ್ ಭಾಷಿಕರೂ ಕೂಡ ಸ್ವಲ್ಪ ಸಂಖ್ಯೆಯಲ್ಲಿ ಇದ್ದಾರೆ. ಭಾರತದ ೨೦೧೧ರ ಜನಗಣತಿಯ ಪ್ರಕಾರ, ಜಿಲ್ಲೆಯ ೬೫.೮೬% ಜನರು ಕೊಂಕಣಿ, ೧೪.೩೬% ಮರಾಠಿ, ೮.೬೫% ಹಿಂದಿ, ೩.೬೨% ಕನ್ನಡ, ೨.೩೯% ಉರ್ದೂ ಹಾಗೂ ಉಳಿದ ೫.೧೨% ಜನರು ಬೇರೆ ಭಾಷೆಗಳನ್ನು ತಾಯಿನುಡಿಯಾಗಿ ಹೊಂದಿದ್ದಾರೆ. === ಧರ್ಮ === ಹಿಂದೂ ಧರ್ಮವು (೭೬%) ಉತ್ತರ ಗೋವಾದಲ್ಲಿ ಅತಿಹೆಚ್ಚು ಜನರು ಅನುಸರಿಸುವ ಧರ್ಮವಾಗಿದೆ. ಕ್ರೈಸ್ತರು (೧೬%) ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. == ಪ್ರವಾಸೋದ್ಯಮ == ಉತ್ತರ ಗೋವಾ ಕಡಲತೀರಗಳಿಗೆ ಪ್ರಸಿದ್ಧವಾಗಿದೆ. ಕೆಲ ಪ್ರಮುಖ ಕಡಲತೀರಗಳೆಂದರೆ ಅಂಜುನ ಬೀಚ್, ಕಾಂಡೊಲಿಂ ಬೀಚ್, ಮಾಂದ್ರೆ ಬೀಚ್, ಕಲಂಗುಟ್ ಬೀಚ್, ಮೋರ್ಜಿಂ ಬೀಚ್ ಮತ್ತು ಅರಂಬೋಲ್ ಬೀಚ್. ಇತರ ಪ್ರವಾಸಿ ತಾಣಗಳೆಂದರೆ ಅಗ್ವಾಡ ಕೋಟೆ, ಮೇ ಡೆ ಡ್ಯೂಸ್ ಚರ್ಚ್ ಮತ್ತು ಬೋದ್ಗೇಶ್ವರ ದೇವಸ್ಥಾನ. ಚೋರಾವ್ ಮತ್ತು ದಿವಾರ್ ದ್ವೀಪಗಳನ್ನು ದೋಣಿಯ ಮೂಲಕ ತಲುಪಬಹುದು ಇದೆ. == ಚಿತ್ರಸಂಪುಟ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಉತ್ತರ ಗೋವಾ ಜಿಲ್ಲೆಯ ಜಾಲತಾಣ